ಗಡಿ ವಿಚಾರದಲ್ಲಿ ಕೆಣಕಲು ಬಂದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಗೆ ಭಾರತದ ಶಕ್ತಿಯ ಅರಿವಾಯಿತೇ ?

ಚೀನಾ ಕುತಂತ್ರವೆಂದೇ ಹೇಳಲ್ಪಡುವ  ಕೊರೊನಾ ಮರಣಮೃದಂಗದ ನಡುವೆಯೇ ಭಾರತ ಚೀನಾ ಗಡಿ ಬಿಕ್ಕಟ್ಟು ಉಲ್ಬಣಗೊಂಡಿದೆ. ಉಭಯ ದೇಶಗಳೂ ಲಡಾಖ್‌ನ ಅಂತಾರಾಷ್ಟ್ರೀಯ ಗಡಿಯಲ್ಲಿ ಸೇನೆ ನಿಯೋಜನೆ ಹೆಚ್ಚಿಸುವುದರೊಂದಿಗೆ ಪರಿಸ್ಥಿತಿ ಉದ್ವಿಗ್ನತೆಗೆ ತಿರುಗಿದೆ. ಪ್ರಧಾನಿ ಮೋದಿ ಮತ್ತು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮಂಗಳವಾರ ಸೇನಾ ಮುಖಂಡರೊಂದಿಗೆ ಪ್ರತ್ಯೇಕ ತುರ್ತು ಸಭೆಗಳನ್ನು ನಡೆಸಿರುವುದು ಪರಿಸ್ಥಿತಿಯ ಗಂಭೀರತೆಗೆ ಸಾಕ್ಷಿಯಾಗಿದೆ. ಗಡಿಯಲ್ಲಿ ಸೇನೆಯನ್ನು ಹೆಚ್ಚಿಸಿ ಚೀನಾದ ಆಕ್ರಮಣಕಾರಿ ನಡೆಗೆ ತಿರುಗೇಟು ನೀಡಿದೆ.

ಲಡಾಖ್‌ ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆಯಾದ ಬಳಿಕ ಈ ಭಾಗದ ಗಡಿಯಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ಅಭಿವೃದ್ಧಿ ಕಾರ್ಯಗಳಿಗೆ ಭಾರತ ವೇಗ ನೀಡಿರುವುದು ಚೀನಾದ ಅಸಮಾಧಾನಕ್ಕೆ ಮತ್ತೊಂದು ಮುಖ್ಯ ಕಾರಣ. ಚೀನಾದ ನಡೆಗೆ ಭಾರತ ಖಡಕ್‌ ಪ್ರತ್ಯುತ್ತ ನೀಡಿದೆ. ಗಡಿಯಲ್ಲಿ ಸಶಸ್ತ್ರ ಪಡೆಗಳಿಗೆ ಸನ್ನದ್ಧತೆಯ ಸಂದೇಶ ರವಾನಿಸಿದೆ. ಅಲ್ಲದೆ, ಯಾವುದೇ ಕಾರಣಕ್ಕೂ ಅಭಿವೃದ್ಧಿ ಕಾಮಗಾರಿ ಸ್ಥಗಿತಗೊಳಿಸುವ ಪ್ರಶ್ನೆಯೇ ಇಲ್ಲವೆಂದು ಭಾರತ ಸ್ಪಷ್ಟಪಡಿಸಿದೆ. ಗಡಿಯಲ್ಲಿ ನಿಯೋಜನೆಗೊಂಡಿರುವ ಸೇನೆ ಸದ್ಯಕ್ಕೆ ವಾಪಸ್‌ ಕರೆಸುವುದಿಲ್ಲ ಎಂದಿದೆ.

ಗಡಿಯಲ್ಲಿ ದಿನದಿಂದ ದಿನಕ್ಕೆ ಸೈನ್ಯ ಬಲವರ್ಧನೆ ಮಾಡಿಕೊಳ್ಳುತ್ತಿರುವ ಚೀನಾ, ಭಾರತದೊಂದಿಗೆ ಬೃಹತ್ ಮಿಲಿಟರಿ ಮುಖಾಮುಖಿ ನಡೆಸಲು ಸಿದ್ಧತೆ ನಡೆಸಿದೆ ಎಂದೇ ಅನುಮಾನಿಸಲಾಗಿದೆ.ಇನ್ನು ಗಡಿಯಲ್ಲಿ ಭಾರತ ಕೂಡ  ಅತಿ ತೀಕ್ಷ್ಣ ಪ್ರತಿಕ್ರಿಯೆ ನೀಡುತ್ತದೆ ಎಂಬ ಅರಿವು  ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್  ಅವರಿಗಾಗಿದೆ.

ಇದಕ್ಕೆ ಪುಷ್ಠಿ ಎಂಬಂತೆ ಗಡಿಯಲ್ಲಿ ಎದುರಾಗುವ ಯಾವುದೇ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಂಪೂರ್ಣ ಸಜ್ಜಾಗುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ತಮ್ಮ ಸೇನೆಗೆ ಕರೆ ನೀಡಿದ್ದಾರೆ.ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ(ಪಿಎಲ್‌ಎ) ಸಭೆಯಲ್ಲಿ ಮಾತನಾಡಿದ ಕ್ಸಿ ಜಿನ್‌ಪಿಂಗ್, ದೇಶದ ಸಾರ್ವಭೌಮತ್ವವನ್ನು ಕಾಪಾಡಲು ಯಾವುದೇ ಸಂಭಾವ್ಯ ದಾಳಿಯನ್ನು ಹಿಮ್ಮೆಟ್ಟಿಸಲು ಸಜ್ಜಾಗುವಂತೆ ಸೇನೆಗೆ ಕರೆ ನೀಡಿದ್ದಾರೆ.



Comments