ರಾಜ್ಯದಲ್ಲಿ ಎಲ್ಲಾದರೂ ಗೋ ಹತ್ಯೆ ಕಂಡು ಬಂದರೆ ಕೂಡಲೇ 1962ಕ್ಕೆ ಕರೆ ಮಾಡಿ, ಮಾಹಿತಿ ನೀಡಿ: ಸಚಿವ ಪ್ರಭು ಚೌವ್ಹಾಣ್

 ಕರ್ನಾಟಕದ ಯಾವುದೇ  ಪ್ರದೇಶ, ಯಾವುದೇ ಗ್ರಾಮದಲ್ಲಿಯೇ ಆದರೂ ಗೋಹತ್ಯೆ ಕಂಡು ಬಂದ ಕೂಡಲೇ 1962ಕ್ಕೆ ಕರೆ ಮಾಡಿ ಮಾಹಿತಿ ದೂರು ದಾಖಲಿಸುವಂತೆ ಸಚಿವ ಪ್ರಭು ಚೌವ್ಹಾಣ್ ಅವರು ಜನರ ಬಳಿ ಮನವಿ ಮಾಡಿಕೊಂಡಿದ್ದಾರೆ. 

ಗೋಹತ್ಯೆ ನಿಷೇಧಕ್ಕೆ ರಾಜ್ಯಪಾಲರ ಅಂಕಿತ ದೊರೆತಿದ್ದು ಇದಕ್ಕೆ ಬೆನ್ನೆಲು ಬಾಗಿ ನಿಂತ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರಿಗೆ, ಸಚಿವ ಸಂಪುಟದ ಎಲ್ಲ ಸಹೊದ್ಯೋಗಿ ಗಳಿಗೆ ಪಕ್ಷದ ವರಿಷ್ಠರಿಗೆ,ರಾಜ್ಯದ ಎಲ್ಲ ಬಿಜೆಪಿ ಶಾಸಕರಿಗೆ ಇಲಾಖೆಯ ಅಧಿಕಾರಿಗಳಿಗೆ ಹಾಗೂ ಗೋವು ಸಂರಕ್ಷಣೆಯಲ್ಲಿ ತೊಡಗಿದವರಿಗೆ ಚೌವ್ಹಾಣ್ ಅವರು ಗುರುವಾರ ಅಭಿನಂದನೆಗಳನ್ನು ತಿಳಿಸಿದರು. 

ಬಳಿಕ ಮಾತನಾಡಿದ ಅವರು, ಈ ಕಾಯ್ದೆಗೆ ಸಂಬಂಧಪಟ್ಟ ನಿಯಮಗಳನ್ನು ರಚಿಸುವಂತೆ ಪ್ರಧಾನ ಕಾರ್ಯದರ್ಶಿಗಳಿಗೆ ಈಗಾಗಲೇ ಸೂಚಿಸ ಲಾಗಿದೆ.ಕಸಾಯಿಖಾನೆಗೆ ಒಯ್ಯುವಾಗ ರಕ್ಷಿಸಲಾದ ಗೋವುಗಳನ್ನು ಸಾಕಲು ಸಾರ್ವಜನಿಕರು ಮುಂದೆ ಬಂದರೆ ಅವರಿಗೆ ಪ್ರೋತ್ಸಾಹ ನೀಡಲಾಗುತ್ತದೆ.

ಆರ್ಥಿಕವಾಗಿ ಸಬಲರು,ಆಸಕ್ತರು ಗೋವನ್ನು ಮನೆಯಲ್ಲಿ ಸಾಕಿದರೆ ಸಂರಕ್ಷಣೆಗೆ ಮತ್ತಷ್ಟು ಬಲದೊರೆತಂತಾಗುತ್ತದೆ. ಗೋವಿನ ಬಗ್ಗೆ ಸಮಾಜದಲ್ಲಿರುವ ಪ್ರೀತಿ,ಶ್ರದ್ಧೆ ಮತ್ತು ಸಂರಕ್ಷಣಾ ಮನೋಭಾವ ದೇಸಿ ಗೋವುಗಳ ಸಂರಕ್ಷಣೆಗೆ ಸಹಕಾರಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಗೋವುಗಳ ರಕ್ಷಣೆಗಾಗಿ ಈಗಾಗಲೇ ಪಶು ಸಂಜೀವಿನ ಸಹಾಯವಾಣಿ (1962) ಇದ್ದು, ರಾಜ್ಯದಲ್ಲಿ ಗೋಹತ್ಯೆ ಕಂಡು ಬಂದ ಕೂಡಲೇ ಕರೆ ಮಾಡಿ ದೂರು ದಾಖಲಿಸಬಹುದು. ಕೂಡಲೇ ಅಧಿಕಾರಿಗಳು ಸ್ಥಳೀಯ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿ, ಕ್ರಮ ಕೈಗೊಳ್ಳುವಂತೆ ಮಾಡುತ್ತಾರೆ. ಅಕ್ರಮವಾಗಿ ಗೋವುಗಳನ್ನು ಸಾಗಿಸುವವರ ವಿರುದ್ಧ ಕಠಿಣ ಕ್ರಮ ಹಾಗೂ ಭಾರೀ ಮೊತ್ತದ ದಂಡವನ್ನೂ ವಿಧಿಸಲಾಗುತ್ತದೆ. ಬುಧವಾರದಿಂದ ಕಾಯ್ದೆ ಜಾರಿಗೆ ಬಂದಿದ್ದು, ರಕ್ಷಣೆ ಮಾಡಿದ ಗೋವುಗಳನ್ನು ಗೋಶಾಲೆಗಳಿಗೆ ನೀಡುವಂತೆ ಈಗಾಗಲೇ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಖಾಸಗಿ ಹಾಗೂ ಸರ್ಕಾರಿ ಮಟ್ಟದಲ್ಲಿ ಎಲ್ಲಾ ತಾಲೂಕುಗಳಲ್ಲೂ ಗೋಶಾಲೆಗಳನ್ನು ತೆರೆಯಲು ಚಿಂತನೆಗಳು ನಡೆಯುತ್ತಿವೆ ಎಂದು ತಿಳಿಸಿದ್ದಾರೆ. 



Comments